ಡಿ. 19ರ ಬೆಳಗಾವಿ ಚಳಿಗಾಲದ ಅಧಿವೇಶನ
ಬೆಳಗಾವಿ: ಬೆಳಗಾವಿ ಚಳಿಗಾಲದ ಅಧಿವೇಶನದ ವಿಧಾನಪರಿಷತ್ನಲ್ಲಿ ನಡೆದ ಉತ್ತರ ಕರ್ನಾಟಕ ವಿಷಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆಗಳಿಗೆ ನೀಡಿದ ಉತ್ತರಗಳು ಇಲ್ಲಿವೆ.
ಉತ್ತರ ಕರ್ನಾಟಕದ ಬಗ್ಗೆ ಎರಡೂ ಸದನಗಳಲ್ಲಿ ಹೆಚ್ಚು ಸದಸ್ಯರು ಮಾತನಾಡಿದ್ದಾರೆ. ಇಲ್ಲಿ ಬಿಜೆಪಿಯವರು 7 ಜನ ಹಾಗೂ ಕಾಂಗ್ರೆಸ್ ನ 5 ಜನ ಮಾತನಾಡಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಸೇರಿದಂತೆ ಒಟ್ಟು 5 ಗಂಟೆ 48 ನಿಮಿಷ ಮಾತನಾಡಿದ್ದಾರೆ. ಉತ್ತರ ಕರ್ನಾಟಕದ ಚರ್ಚೆ ಅಧಿವೇಶನದ ಎರಡನೇ ದಿನವೇ ಪ್ರಾರಂಭವಾಗಿದ್ದು, ಇದೇ ಮೊದಲನೇ ಬಾರಿ.
ವಿಧಾನ ಪರಿಷತ್ ಅನ್ನು ಹಿರಿಯರ ಮನೆ ಎಂದು ಕರೆಯಲಾಗುತ್ತಿದ್ದು, ಇಲ್ಲಿನ ಸದಸ್ಯರ ಮಾತಿಗೆ ತೂಕವಿರುತ್ತದೆ. ಸದಸ್ಯರ ಸಲಹೆಗಳು ಉತ್ತರ ಕರ್ನಾಟಕದ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗುತ್ತದೆ. ಕರ್ನಾಟಕದಲ್ಲಿ 6.95 ಕೋಟಿ ಜನರಿದ್ದಾರೆ. ಅದರಲ್ಲಿ ಉತ್ತರ ಕರ್ನಾಟಕದಲ್ಲಿ 2.96,28,767 ಜನರಿದ್ದಾರೆ. 42% ಮಾತ್ರ ಉತ್ತರ ಕರ್ನಾಟಕದಲ್ಲಿ ಇದ್ದಾರೆ. 58% ದಕ್ಷಿಣ ಕರ್ನಾಟಕದಲ್ಲಿದ್ದಾರೆ. ಉತ್ತರ ಕರ್ನಾಟಕದಲ್ಲಿ 31 ಜಿಲ್ಲೆಗಳಲ್ಲಿ 14 ಉತ್ತರ ಕರ್ನಾಟಕಕ್ಕೆ ಬರುತ್ತವೆ. 224 ವಿಧಾನ ಸಭಾ ಕ್ಷೇತ್ರಗಳಲ್ಲಿ 97 ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕ ಭಾಗದಲ್ಲಿ ಬರುತ್ತವೆ.
ರಾಜ್ಯದ ಸಮಗ್ರ ಅಭಿವೃದ್ಧಿಗೆ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಯಾಗಿ ಸಮಾನತೆ ಸಾಧಿಸಬೇಕು. ಪ್ರಾದೇಶಿಕ ಅಸಮಾನತೆ ನಿವಾರಿಸದಿದ್ದರೆ, ಜನರ ಕೂಗು ಇದ್ದೇ ಇರುತ್ತದೆ. ಉತ್ತರ ಕರ್ನಾಟಕದ ಬಗ್ಗೆ ಅಭಿವೃದ್ಧಿಯಾಗದೇ ಇರಲು ಹಲವು ಕಾರಣಗಳಿವೆ.
ಬೆಂಗಳೂರು ಹಾಲು ಯೂನಿಯನ್ನಲ್ಲಿ ನೋಡಿದರೆ ಒಂದು ದಿನಕ್ಕೆ 17 ಲಕ್ಷ ಲೀ. ಉತ್ಪಾದನೆಯಗುತ್ತಿದ್ದು, ಕಲಬುರ್ಗಿ ಹಾಲು ಯೂನಿಯನ್ ದಲ್ಲಿ 67 ಸಾವಿರ ಲೀ. ಹಾಲು ಉತ್ಪಾದನೆಯಾಗುತ್ತದೆ. ಇದು ಪ್ರಾದೇಶಿಕ ಅಸಮಾನತೆಗೆ ಸ್ಪಷ್ಟ ಉದಾಹರಣೆಯಾಗಿದೆ. ಇದು ಜಿಲ್ಲಾವಾರು ತಲಾ ಆದಾಯದ ಮೇಲೂ ಪರಿಣಾಮ ಬೀರುತ್ತದೆ. ಕರ್ನಾಟಕ ರಾಜ್ಯದಲ್ಲಿ ಸರಾಸರಿ ತಲಾ ಆದಾಯ 3,39,813 ರೂ. ಇದೆ. ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲಿ ನಂ.1 ರಾಜ್ಯವಾಗಿದೆ. ಹೈನುಗಾರಿಕೆ ಚಟುವಟಿಕೆಗಳು, ಕೈಗಾರಿಕೆಗಳು ಜಾಸ್ತಿಯಾದರೆ, ಜನರ ವಲಸೆ ಕಡಿಮೆಯಾಗಿ ಆರ್ಥಿಕತೆ ಸುಧಾರಿಸಿ, ತಲಾ ಆದಾಯವೂ ಜಾಸ್ತಿಯಾಗುತ್ತದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನರ ತಲಾವಾರು ಆದಾಯ ಹೆಚ್ಚಾಗಿದೆ. ಆದ್ದರಿಂದ ಕರ್ನಾಟಕ ತಲಾವಾರು ಆದಾಯದಲ್ಲಿ ಮೊದಲನೇ ಸ್ಥಾನದಲ್ಲಿದೆ.
ಹೈದರಾಬಾದ್ ಕರ್ನಾಟಕವನ್ನು 371ಜೆ ಗೆ ಸೇರಿಸಬೇಕೆಂದು ಬಹಳ ಹಿಂದಿನಿಂದಲೂ ಕೂಗಿತ್ತು. 1991ರಲ್ಲಿ ಹೆಚ್.ಕೆ.ಡಿ.ಬಿ ಪ್ರಾರಂಭವಾಯಿತು. 6/11/2013 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಸೇರ್ಪಡೆಯಾಯಿತು. 371 ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ. ಬಿಜೆಪಿಯ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು ಅದನ್ನು ತಿರಸ್ಕರಿಸಿದರು. ಹೆಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಶೇ. 85% ರಷ್ಟು ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಬೇಕೆಂದು ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 8% ಮಾಡಬೇಕೆಂದು ಮಾಡಿದ್ದ ಶಿಫಾರಸ್ಸನ್ನು ಯಥಾವತ್ತು ಜಾರಿಗೆ ತರಲಾಯಿತು.
2013-14 ರಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುತ್ತಿದೆ. 2023 ರಲ್ಲಿ ₹3,000 ಕೋಟಿ, 2024/25 ರಲ್ಲಿ ₹3,000 ಕೋಟಿ, 2025/2026 ರಲ್ಲಿ ₹5,000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು ಅನುದಾನ ನೀಡಿರುವುದು ₹24,778 ಕೋಟಿಯಾದರೆ, ಬಿಡುಗಡೆಯಾಗಿರುವುದು 16,229 ರೂಪಾಯಿ, ಇಲ್ಲಿಯವರೆಗೆ ವೆಚ್ಚವಾಗಿರುವುದು 14,890 ರೂಪಾಯಿಗಳು. 2013 -14 ರಿಂದ ಇಲ್ಲಿಯವರೆಗೆ ಬಿಜೆಪಿಯ ಕೇಂದ್ರ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಬಿಜೆಪಿಯವರು ಉತ್ತರ ಕರ್ನಾಟಕ ಅಭಿವೃದ್ಧಿಯ ವಿರೋಧಿಗಳು.
ಜಲಜೀವನ್ ಮಿಷನ್ ನಡಿ 13,500 ಸಾವಿರ ಕೋಟಿ ರೂ. ಕೇಂದ್ರ ಕೊಡದೆ ರಾಜ್ಯದಲ್ಲಿ ಅಭಿವೃದ್ಧಿ ಸಾಧಿಸಲು ಹೇಗೆ ಸಾಧ್ಯ? ರಾಜ್ಯದ ಪಾಲಿನ 22,000 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕಳಸಾ ಬಂಡೂರಿ ಯೋಜನೆಗೆ ಸರ್ವ ಪಕ್ಷ ನಿಯೋಗವನ್ನು ಕೇಂದ್ರಕ್ಕೆ ಒಯ್ಯಲಾಗಿತ್ತು. ಆಗ ಪ್ರಧಾನಿ ನರೇಂದ್ರ ಮೋದಿಯವರು ಸರಿಯಾದ ಪರಿಹಾರ ನೀಡಿರಲಿಲ್ಲ. 2018 ರಲ್ಲಿ ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಈ ಸಮಸ್ಯೆ ಬಗೆಹರಿಸುವುದಾಗಿ ಘೋಷಿಸಿದ್ದರು. ಆದರೆ ಇದುವರೆಗೆ ಈ ಯೋಜನೆಗೆ ಹಸಿರು ನಿಶಾನೆ ದೊರೆತಿಲ್ಲ.
ಎರಡನೇ ಬಾರಿ ನಾನು ಮುಖ್ಯಮಂತ್ರಿಯಾಗಿದ್ದು, ನನ್ನನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿಯವರು 9 ವರ್ಷದಲ್ಲಿ 5 ಜನ ಮುಖ್ಯಮಂತ್ರಿಗಳಾಗಿದ್ದರು. ಬಿಜೆಪಿಯ ಹುಳಿಹಿಂಡುವ ಪ್ರಯತ್ನ ಸಫಲವಾಗುವುದಿಲ್ಲ. ನಮ್ಮ ಸರ್ಕಾರ ಗಟ್ಟಿಯಾಗಿದ್ದು, ಅಸ್ಥಿರವಾಗುವ ಪ್ರಶ್ನೆಯೇ ಇಲ್ಲ. ಇದು ಬಿಜೆಪಿಯ ಭ್ರಮೆ. ತನ್ನ ಪೂರ್ಣ ಅವಧಿಯನ್ನು ಮುಗಿಸಿ, ನಂತರ 2028 ರಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ.

