ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಶತಮಾನಗಳ ಹಿಂದೆಯೇ ಕನ್ನಡ ನಾಡನ್ನು ಕನ್ನಡಿಗರೇ ಆಳಿದ್ದರು. ಹೀಗಿದ್ದರೂ ಕನ್ನಡ ನಾಡಿನ ಪರಿಪೂರ್ಣ ಪರಿಕಲ್ಪನೆ ಸಾಕಾರಗೊಂಡಿದ್ದು, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 1956ರ ನವೆಂಬರ್ 1 ರಂದು ವಿಶಾಲ ಮೈಸೂರು ರಾಜ್ಯ ಮೈ ದಳೆದಾಗ.
1973ರ ನವೆಂಬರ್ 1 ರಂದು ರಾಜ್ಯಕ್ಕೆ ಕರ್ನಾಟಕ ಎಂದು ಕನ್ನಡ ನಾಡು ಮರುನಾಮಕರಣಗೊಂಡಾಗ ಕನ್ನಡಿಗರೆಲ್ಲರೂ ಸಾಂಸ್ಕೃತಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಪೂರ್ಣವಾಗಿ ಒಂದಾದರು.
ಇದೀಗ ನಾವು ಸ್ವಾತಂತ್ಯ್ರಾನಂತರ ನಂತರ ಉದಯಿಸಿದ ಕನ್ನಡ ನಾಡಿನ 76 ವಸಂತಗಳಿಗೆ ಸಾಕ್ಷಿಯಾಗಿದ್ದೇವೆ. ನಮ್ಮದು ಬಹುತ್ವದ ವ್ಯವಸ್ಥೆ, ಇಲ್ಲಿ ಬಹುಭಾಷೆ, ಬಹುಸಂಸ್ಕೃತಿ ಮತ್ತು ಬಹುಮಾದರಿಯ ಜನಾಂಗಗಳಿವೆ. ಈ ಎಲ್ಲ ಸಮುದಾಯಗಳು ಸಾಮುದಾಯಿಕ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ದವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿದೆ. ಇಂತಹ ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗೂ ಒಕ್ಕೂಟದ ಭಾವೈಕ್ಯವನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನದ ಆಶಯಕ್ಕನುಗುಣವಾಗಿಯೇ ಭಾಷಾವಾರು ಪ್ರಾಂತ್ಯಗಳ ರಚನೆಯಾಗಿದೆ.
ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ, ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯಭಾಷೆ ಸಾರ್ವಭೌಮ ಭಾಷೆಯೇ ಹೊರತು ಬೇರೆ ಭಾಷೆ ಅಲ್ಲ.
ರಾಜ್ಯ ಭಾಷೆಯಲ್ಲದ ಬೇರೆ ಭಾಷೆ ಈ ನೆಲದ ಬದುಕಿನ ಮೇಲೆ ಆಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯದ ರಚನೆಯ ನೀತಿಗೆ ವಿರುದ್ಧವಾದುದು. ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದುದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ.
ಮಾತೃ ಭಾಷೆಯ ವ್ಯಾಖ್ಯಾನವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ಅದು ವೈಜ್ಞಾನಿಕವಾದ ವಾದ ವ್ಯಾಖ್ಯಾನ ಅಲ್ಲ. ಮಾತೃಭಾಷೆ ಎನ್ನುವುದು ಪರಿಸರದ ಭಾಷೆ. ಪರಿಸರ ಭಾಷೆ ಎಂದರೆ ಪ್ರಾದೇಶಿಕ ಮಾನ್ಯತೆ ಪಡೆದ ಭಾಷೆ. ಪ್ರಾದೇಶಿಕ ಆಶೋತ್ತರಗಳನ್ನು ಮೈಗೂಡಿಸಿಕೊಂಡ ಭಾಷೆ ಎಂಬುದನ್ನು ಯಾರೂ ಮರೆಯಬಾರದು.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡಕ್ಕೇ ಅಗ್ರ ಸ್ಥಾನ. ಕನ್ನಡ ಭಾಷೆಯದ್ದೇ ಸಾರ್ವಭೌಮತ್ವ. ಇದನ್ನು ಯಾರೂ ಅಲ್ಲಗೆಳೆಯುವಂತಿಲ್ಲ. ಆಯಾ ಪ್ರದೇಶದ ಭಾಷೆಯನ್ನು ಗೌರವಿಸಬೇಕೆಂದು ಭಾಷಾವಾರು ನೀತಿ ಹೇಳುತ್ತದೆ.
ನಮ್ಮ ನೆಲದಲ್ಲಿ ಕನ್ನಡ ಭಾಷೆಯೊಂದೇ ಇಲ್ಲ. ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ ಕೊಂಕಣಿ ಮತ್ತಿತರ ಭಾಷೆಗಳಿವೆ. ನಮ್ಮ ಕನ್ನಡದೊಂದಿಗೆ ಬೇರು ಬಿಟ್ಟಿರುವ ಉರ್ದು, ಲಂಬಾಣಿ ಹಾಗೂ ಬ್ಯಾರಿ ಭಾಷೆಗಳಿವೆ. ಇವೆಲ್ಲವನ್ನೂ ಬೇರೆ ಎಂದು ನಾವು ಎಂದೂ ಭಾವಿಸಿಯೇ ಇಲ್ಲ.
ಭಾರತದ ಎಲ್ಲಾ ಭಾಷಿಗರೂ ಕರ್ನಾಟಕದಲ್ಲಿದ್ದಾರೆ. ಅಷ್ಟೇ ಏಕೆ ? ವಿಶ್ವದ ಬಹುತೇಕ ಭಾಷಿಗರೂ ಕರ್ನಾಟಕದಲ್ಲಿದ್ದಾರೆ. ಕರ್ನಾಟಕದಲ್ಲಿ ವಾಸಿಸಿರುವವರೆಲ್ಲರೂ ಕನ್ನಡಿಗರು ಎಂಬುದೇ ನಮ್ಮ ಭಾವನೆ.
ಕನ್ನಡ ಭಾಷೆ ಇಂದು ದೇಶದಲ್ಲಿಯೇ ಅತ್ಯಂತ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಬಹುತ್ವದ ಭಾಷೆ. ಏಕಮುಖವಾಗಿ ಸಾಗುತ್ತಿದ್ದ ಕನ್ನಡ ಸಾಹಿತ್ಯ ಆಳ-ಅಗಲಗಳಿಗೆ ವಿಸ್ತರಿಸಿಕೊಂಡು ಎಲ್ಲ ಬಗೆಯ ಅನುಭವಲೋಕಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವ ಬಗ್ಗೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕು.
ಅಲೆಮಾರಿಗಳಿಂದ ಹಿಡಿದು ಮಂಗಳಮುಖಿಗಳ ವರೆಗೆ ಎಲ್ಲ ಜಾತಿ-ಧರ್ಮ-ವರ್ಗಗಳ ಸಂವೇದನೆಗಳನ್ನೊಳಗೊಂಡಂತೆ ಕನ್ನಡ ಸಾಹಿತ್ಯ-ಭಾಷೆ ಬೆಳೆಯುತ್ತಿದೆ.
ಕರ್ನಾಟಕದಲ್ಲಿರುವ ಕನ್ನಡೇತರರನ್ನು ಕನ್ನಡಿಗರು ಎಂದು ಒಪ್ಪಿಕೊಳ್ಳುವ ಉದಾರ ಮನಸ್ಸು ನಮ್ಮದಾಗಿರುವಾಗ, ರಾಜ್ಯದಲ್ಲಿ ವಾಸವಾಗಿರುವ ಕನ್ನಡೇತರರೂ ಕನ್ನಡ ಭಾಷೆಯನ್ನು ಕಲಿಯುವ, ಕನ್ನಡದಲ್ಲೇ ಮಾತನಾಡುವ ಹಾಗೂ ಕನ್ನಡ ಭಾಷೆಯಲ್ಲೇ ವ್ಯವಹರಿಸುವ ಪ್ರಯತ್ನವನ್ನು ಮಾಡಬೇಕು ಎಂಬುದು ನಮ್ಮ ಅಪೇಕ್ಷೆ ಹಾಗೂ ನಿರೀಕ್ಷೆ.
ಯಾವುದೇ ಭಾಷೆಯ ಹೇರಿಕೆಯನ್ನು ಯಾರೂ ಒಪ್ಪುವುದಿಲ್ಲ. ಯಾವುದೇ ಭಾಷೆಯ ಕಲಿಕೆಯನ್ನೂ ತಡೆಯುವುದು ಸಮಂಜಸವೂ ಅಲ್ಲ. ಸಮರ್ಪಕವೂ ಅಲ್ಲ. ಭಾಷೆ ಎಂಬುದು ಬಾಂಧವ್ಯಗಳ ಬೆಸೆಯುವ ಸಾಧನವಾಗಬೇಕು. ಭಾವನೆಗಳ ಕೆರಳಿಸುವ ಅಸ್ತ್ರವಾಗಬಾರದು ಎಂಬುದನ್ನು ಅರ್ಥೈಸಿಕೊಂಡಿರುವವನು ನಾನು.
ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಕಲಿಕಾ ಲೋಕದಲ್ಲಿ ಪಯಣಿಸಬೇಕಾದರೆ ತಮಗೆ ಬೇಕಾದ ಭಾಷೆಗಳನ್ನು ಆಯ್ದುಕೊಂಡು ವ್ಯಾಸಂಗ ಮಾಡುವ ಅವಕಾಶ ಕಲಿಯುವವರದ್ದೇ ಆಗಿರಬೇಕು. ಆದರೆ, ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯ ಹಾಗೂ ಪ್ರಾದೇಶಿಕ ಭಾಷೆಯ ಕಲಿಕೆ ಕಡ್ಡಾಯ ಎಂಬುದನ್ನು ಎಲ್ಲರೂ ಮನಃಪೂರ್ವಕವಾಗಿ ಒಪ್ಪಿಕೊಳ್ಳಲೇಬೇಕು.
ಇಂಗ್ಲಿಷ್ ನಮಗೆ ಬೇಕು. ಆದರೆ ನಮ್ಮ ಭಾಷೆ ಬದಲಿಗೆ ಅಲ್ಲ. ಇಂಗ್ಲಿಷ್ ಒಂದೇ ಅಲ್ಲ. ಇನ್ನೂ ಹಲವೂ ಭಾಷೆಗಳು ನಮಗೆ ಬೇಕು. ಒಂದೊಂದು ಭಾಷೆಯೂ ಒಂದೊAದು ಜಗತ್ತು. ಆದರೆ ಯಾವ ಭಾಷೆ ಬೇಕು ಎನ್ನುವುದು ನಮ್ಮ ಅಗತ್ಯವನ್ನು ಅನುಸರಿಸಿದ್ದು, ಆಯ್ಕೆಯನ್ನು ಅವಲಂಭಿಸಿದ್ದು.
ಭಾಷೆ ಎನ್ನುವುದು ಜ್ಞಾನ ಸಂಪಾದನೆಯ ಸಾಧನವೇ ಹೊರತು ಜ್ಞಾನ ಅಲ್ಲ. ಇಂಗ್ಲೀಷ್ ಮಾತನಾಡಿದರೆ ಮಾತ್ರ ಬುದ್ಧಿವಂತ ಎನ್ನುವ ತಪ್ಪು ಕಲ್ಪನೆ ಮೊದಲು ನಮ್ಮಿಂದ ದೂರವಾಗಬೇಕು.
ಚೀನಾದಲ್ಲಿ, ರಷ್ಯಾ ಹಾಗೂ ಜಪಾನ್ ರಾಷ್ಟಗಳಲ್ಲಿ ಎಲ್ಲಾ ಪಠ್ಯ ಚಟುವಟಿಕೆಗಳೂ ಚೀನಿ, ರಷ್ಯನ್ ಹಾಗೂ ಜಪಾನೀ ಭಾಷೆಗಳಲ್ಲೇ ಇವೆ. ಅಲ್ಲೂ ವಿಶ್ವ ವಿಖ್ಯಾತ ವಿಜ್ಞಾನಿಗಳಿದ್ದಾರೆ, ಸುಪ್ರಸಿದ್ದ ವೈದ್ಯರಿದ್ದಾರೆ, ಖ್ಯಾತ ಸಂಶೋಧಕರಿದ್ದಾರೆ, ಹೆಸರಾಂತ ಇಂಜಿನಿಯರ್ಗಳಿದ್ದಾರೆ. ಅತ್ಯದ್ಭುತ ಶಿಕ್ಷಣ ತಜ್ಞರಿದ್ದಾರೆ.

ಬಡವ-ಬಲ್ಲಿದರೆನ್ನದೆ, ಹಳ್ಳಿ-ಪಟ್ಟಣಗಳೆನ್ನದೆ ಎಲ್ಲ ಕಡೆ ಇಂಗ್ಲೀಷ್ ಮಾಧ್ಯಮದ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇದನ್ನು ಕೇವಲ ಸರ್ಕಾರ ನಿಯಂತ್ರಿಸಲಾಗುವುದಿಲ್ಲ. ಈ ಕೆಲಸ ಸಮುದಾಯದಿಂದ ಆಗಬೇಕಾಗಿದೆ. ಶ್ರೀಮಂತರಿಗೆ ಇಂಗ್ಲೀಷ್ ಶಾಲೆ, ಬಡವರಿಗೆ ಕನ್ನಡ ಶಾಲೆ ಎಂದಾಗಬಾರದು. ಶ್ರೀಮಂತ ಕುಟುಂಬಗಳ ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಸೇರಿಸಿದರೆ ಉಳಿದವರು ಕೂಡಾ ಅವರ ಹಾದಿಯನ್ನು ಅನುಸರಿಸಲು ಸಾಧ್ಯ ಇದೆ.
ಕನ್ನಡ ಮಾಧ್ಯಮದಲ್ಲಿ ಓದಿದವರು ಹಿಂದುಳಿಯುತ್ತಾರೆ ಎಂಬ ಭೀತಿ ನಿರಾಧಾರವಾದುದು. ನಾನು ನನ್ನ ಊರಿನ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವನು. ಇದೀಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದೇನೆ.
ಕನ್ನಡ ಶಾಲೆಗಳಲ್ಲಿ, ಅದರಲ್ಲೂ ಸರ್ಕಾರಿ ಶಾಲೆಗಳಲ್ಲಿ, ವ್ಯಾಸಂಗ ಮಾಡಿದ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಡಾ ಸಿ ಎನ್ ಆರ್ ರಾವ್ ಅವರು ನಿಜವಾದ ಭಾರತ ರತ್ನಗಳಾಗಿ ವಿಶ್ವ ವಿಖ್ಯಾತರಾಗಿರುವುದು ಕೂಡಾ ನಮ್ಮ ಕಣ್ಣ ಮುಂದಿದೆ. ಭಾಷೆ ಎಂದರೆ ಜ್ಞಾನ ಅಲ್ಲ, ಅದು ಜ್ಞಾನ ಸಂಪಾದನೆಗೆ ಇರುವ ಮಾರ್ಗ ಅಷ್ಟೆ.
ಕನ್ನಡ ಭಾಷೆಯ ಸ್ಥಿತಿ ಸುಧಾರಿಸಬೇಕಾದರೆ ಮೊದಲು ಕನ್ನಡ ಶಾಲೆಗಳ ಸ್ಥಿತಿ ಸುಧಾರಣೆಯಾಗಬೇಕು ಎನ್ನುವುದನ್ನು ನಾನೂ ಒಪ್ಪುತ್ತೇನೆ. ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟದ ಸುಧಾರಣೆಗಾಗಿ ಸರ್ಕಾರ ನಿರಂತರವಾದ ಪ್ರಯತ್ನದಲ್ಲಿದೆ.
ಕನ್ನಡ ಶಾಲೆಗಳ ಕಡೆ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದರೆ ನಮ್ಮ ಪಠ್ಯ ಪುಸ್ತಕಗಳು ಮತ್ತು ಬೋಧನೆಯ ವಿಧಾನದಲ್ಲಿಯೂ ಬದಲಾವಣೆಯಾಗಬೇಕು. ಪಠ್ಯಗಳು ವಿದ್ಯಾರ್ಥಿಗಳ ಆಸಕ್ತಿಯನ್ನು ಕೆರಳಿಸುವಂತಹ ಹೊಸ ವಿಷಯಗಳು, ಸುಂದರ ನಿರೂಪಣೆ, ಹೊಸ ಪದ ಪ್ರಯೋಗಗಳನ್ನು ಒಳಗೊಂಡಿರಬೇಕು.
ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ ಈ ಮೂಲಕ ಕನ್ನಡ ಭಾಷೆಯೂ ಕಳೆದುಹೋಗುತ್ತಿದೆ ಎನ್ನುವುದು ಆತಂಕದ ವಿಷಯ. ಈ ಬೆಳವಣಿಗೆಯನ್ನು ರಾಜ್ಯ ಸರ್ಕಾರ ಗಮನಿಸುತ್ತಿದ್ದು ಗಡಿಭಾಗದಲ್ಲಿ ಕನ್ನಡವನ್ನು ಉಳಿಸಲು ಬದ್ಧವಾಗಿದೆ.
ಕನ್ನಡ ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಾಡಿನ ಯುವ ಸಮುದಾಯದ ಮೇಲಿದೆ. ಭಾಷೆ ಹೊಸ ಚೈತನ್ಯವನ್ನು ಮೈಗೂಡಿಸಿಕೊಂಡು ಬೆಳೆಯಬೇಕಾದರೆ ಅದು ಯುವಸಮುದಾಯದಿಂದ ಮಾತ್ರ ಸಾಧ್ಯ. ಯುವಸಮುದಾಯ ಹಲವು ಜ್ಞಾನಶಾಖೆಗಳಿಗೆ ಮುಖಾಮುಖಿಯಾಗಿ ಕನ್ನಡವನ್ನು ಬಳಸುವುದರಿಂದ ಮಾತ್ರ ಕನ್ನಡ ಉಳಿಯಲು ಸಾಧ್ಯ.

ಕನ್ನಡವೆಂದರೆ ಕೇವಲ ಸೃಜನಶೀಲ ಸಾಹಿತ್ಯವಷ್ಟೇ ಅಲ್ಲ. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಎಂಜನಿಯರಿಂಗ್ ಈ ರೀತಿ ಎಲ್ಲ ಬಗೆಯ ಜ್ಞಾನಶಾಖೆಗಳಲ್ಲಿ ಕನ್ನಡವನ್ನು ಬಳಸಬೇಕು ಮತ್ತು ಬೆಳೆಸಬೇಕು. ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಬೇರೆ ಜ್ಞಾನ ಶಿಸ್ತುಗಳಲ್ಲಿ ತೊಡಗಿಸಿಕೊಂಡ ಪಂಡಿತರು, ಪರಿಣಿತರು, ವಿದ್ವಾಂಸರು ಕನ್ನಡ ಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು.
ಜ್ಞಾನಕ್ಷೇತ್ರಕ್ಕೆ ಸಂಬಂಧಿಸಿದ ಹೊರ ಪರಿಭಾಷೆಯನ್ನು ಕಂಡುಕೊಳ್ಳಬೇಕು. ಕನ್ನಡದ ಜ್ಞಾನ ಸಂಪತ್ತು, ಶಬ್ದ ಸಂಪತ್ತು ಬೆಳೆಯಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸದಾ ಬೆಂಬಲಕ್ಕಿದೆ ಎಂದು ಭರವಸೆ ನೀಡುತ್ತೇನೆ.
ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿರುವ ಅನೇಕ ವೈದ್ಯರು ಕನ್ನಡದಲ್ಲಿ ಬರೆಯುತ್ತಿದ್ದಾರೆ. ಆದರೆ ತಂತ್ರಜ್ಞರು, ಎಂಜಿನಿಯರ್ಗಳು, ವಕೀಲರು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಕನ್ನಡದಲ್ಲಿ ತಂತ್ರಜ್ಞಾನವನ್ನು ಹೇಳಲಿಕ್ಕೆ ಬರುವುದಿಲ್ಲ ಎನ್ನುವ ಪೂರ್ವ ನಿರ್ಧರಿತ ಅಭಿಪ್ರಾಯದಿಂದ ಅಂತಹವರು ಹೊರಬರಬೇಕು.
ನಮ್ಮ ನಾಡಿನ ಜನತೆ ಪ್ರಜ್ಞಾವಂತರಿದ್ದಾರೆ. ಯಾವುದೇ ಹೊಸ ಪರಿಭಾಷೆಯನ್ನು ಆಡುಮಾತಿನಲ್ಲಿಯೇ ಒಳಗೊಳ್ಳುತ್ತಾ ಹೋಗುವ ಜಾಣ್ಮೆ ಅವರಲ್ಲಿದೆ. ಇದೇ ಸಂದರ್ಭದಲ್ಲಿ ಕನ್ನಡಕ್ಕೆ ಒಗ್ಗದ ಪರಿಭಾಷೆಗಳನ್ನು ತಂದು ತುರುಕಿಸುವುದು ಕೂಡಾ ಸರಿ ಅಲ್ಲ, ಎಂಜನಿಯರ್, ಪೊಲೀಸ್ ಎನ್ನುವುದು ಹಾಗೆಯೇ ಇರಲಿ, ಅದಕ್ಕೆ ಅಭಿಯಂತರ, ಆರಕ್ಷಕ ಎಂದು ಬಳಸಿಕೊಂಡು ಗೊಂದಲ ಸೃಷ್ಟಿಸುವುದು ಬೇಡ.
ರಾಜ್ಯ ಸರ್ಕಾರ ತನ್ನ ಆಡಳಿತದಲ್ಲಿ ಕನ್ನಡವನ್ನು ಬಳಸುವುದಕ್ಕೆ ಬದ್ಧವಾಗಿದೆ. ಆದರೂ ಒಂದು ಸೂಚನೆ ಕೊಡಲು ಇಷ್ಟಪಡುತ್ತೇನೆ.
ಮಂತ್ರಿಮಂಡಲದ ನಿರ್ಣಯಗಳು, ಮಂತ್ರಿಗಳ ಟಿಪ್ಪಣಿಗಳು, ವಿಧಾನ ಸಭೆಯ ಮುಂದೆ ಬರುವ ವಿಧೇಯಕಗಳು ಎಲ್ಲವೂ ಕನ್ನಡದಲ್ಲೇ ಇದ್ದುಬಿಟ್ಟರೆ ಕನ್ನಡ ಭಾಷೆಯು ಅನಿವಾರ್ಯವಾಗಿ ಆಡಳಿತದಲ್ಲಿ ನೆಲೆಗೊಳ್ಳುವಂತಾಗುತ್ತದೆ.
ಭವಿಷ್ಯದ ಪ್ರಜೆಗಳೆನಿಸಿರುವ ಮಕ್ಕಳಿಗೆ ಭವ್ಯ ಭವಿಷ್ಯ ದೊರೆಯಲಿ. ಭಾಷೆಯ ಪರಿ ಹಾಗೂ ಸಂಸ್ಕೃತಿಯ ಸಿರಿಯಿಂದ ನಮ್ಮ ಕನ್ನಡ ನಾಡು ಸಮೃದ್ಧವಾಗಿ ಬೆಳೆಯಲಿ ಎಂದು ಹಾರೈಸುತ್ತಾ, ತಮ್ಮೆಲ್ಲರಿಗೂ 68ನೇ ರಾಜ್ಯೋತ್ಸವದ ಶುಭಾಶಯಗಳನ್ನು ಮತ್ತೊಮ್ಮೆ ಸಲ್ಲಿಸುತ್ತೇನೆ. ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.
‘ಕನ್ನಡದ ನೆಲದಲ್ಲಿ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ.’
ಜೈ ಹಿಂದ್ ! ಜೈ ಕರ್ನಾಟಕ !!

