ಮೈಸೂರು: ದೇವರೆಂಬ ನಂಬಿಕೆಯು ಜಾತಿ-ಧರ್ಮಗಳನ್ನು ಮೀರಿದಂಥದ್ದು. ಜಾತಿ-ಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಹೆಚ್.ಡಿ ಕೋಟೆಯ ಶಿರಮಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀ ಲಕ್ಷ್ಮೀದೇವಿ ಅಮ್ಮನವರ ನೂತನ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್.ಡಿ ಕೋಟೆಯ ಶಿರಮಹಳ್ಳಿಯ ಜನರು ದೈವಭಕ್ತರು. ದೇಗುಲದಲ್ಲಿ ಸ್ಥಾಪಿಸುವ ಪ್ರತಿಮೆಯಲ್ಲಿ ದೇವರನ್ನು ಕಾಣುವುದು ನಮ್ಮ ನಂಬಿಕೆ. ಬಸವಾದಿ ಶರಣರು, ದೇವರು ಎಲ್ಲೆಡೆಯೂ, ಎಲ್ಲರಲ್ಲಿಯೂ ಇದ್ದಾನೆ ಎಂದಿದ್ದರು. ನಮ್ಮ ಪ್ರಾರ್ಥನೆಯಲ್ಲಿ ಇತರರ ಒಳಿತನ್ನೂ ಕೇಳಬೇಕು. ದೇವರೆಂಬ ನಂಬಿಕೆಯು ಜಾತಿ-ಧರ್ಮಗಳನ್ನು ಮೀರಿದಂಥದ್ದು. ಎಲ್ಲಾ ಜಾತಿ-ಧರ್ಮಗಳು ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೆಂದೇ ತಿಳಿಸುತ್ತದೆ ಎಂದರು.
ಸಮಾಜದ ಪಟ್ಟಭದ್ರ ಹಿತಾಸಕ್ತಿಗಳು ಸಮಾಜದ ಜಾತಿವ್ಯವಸ್ಥೆ ಹಾಗೂ ಅಸಮಾನತೆಗಳನ್ನು ಬೆಂಬಲಿಸುತ್ತಾರೆ. ಜಾತಿಧರ್ಮಗಳ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಕುಶಕ್ತಿಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಇಂದು ಲಕ್ಷ್ಮೀ ದೇಗುಲದ ಉದ್ಘಾಟನೆಯನ್ನು ಜಾತ್ರೆಯ ರೀತಿಯಲ್ಲಿ ಆಯೋಜಿಸಿರುವುದು ಸಂತಸದ ವಿಚಾರ. ಜಾತಿಧರ್ಮಗಳ ಬೇಧ ಮರೆದು ಜನರು ಒಗ್ಗಟ್ಟಾಗುವ ಅವಶ್ಯಕತೆ ಹಿಂದಿಂದೆಗಿಂತಲೂ ಹೆಚ್ಚಿದೆ ಎಂದು ತಿಳಿಸಿದರು.
ಶಿರಮಳ್ಳಿಯ ಜನರು ಪ್ರೀತಿಯಿಂದ ನನ್ನನ್ನು ಬೆಂಬಲಿಸುತ್ತಿರುವುದಕ್ಕೆ ಅಭಿನಂದನೆಗಳು. ಶಿರಮಳ್ಳಿ ಗ್ರಾಮ ಸೇರಿದಂತೆ ಈ ಭಾಗದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರ ಆಶೀರ್ವಾದದಿಂದ ಕರ್ನಾಟಕದ ಇತಿಹಾಸದಲ್ಲಿ ಹೆಚ್ಚು ಆಯವ್ಯಯವನ್ನು ಮಂಡಿಸಿದ ಸಾಧನೆ ಸಾಧ್ಯವಾಗಿದೆ. ಶಿರಮಳ್ಳಿ ಶ್ರೀ ಲಕ್ಷ್ಮಿ ದೇವಿ ಅಮ್ಮನವರು ರಾಜ್ಯದ ಜನರಿಗೆ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಿದರು.

