ಶಿಕ್ಷಣದಿಂದ ಗುಲಾಮಗಿರಿ ತೊಡೆದು ಸ್ವಾಭಿಮಾನದ ಬದುಕು ಸಾಧ್ಯ-ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಳಗಾವಿ(ಚಿಕ್ಕೋಡಿ), ಏಪ್ರಿಲ್ 20 : ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ತಿಳಿಸಿದಂತೆ ಶಿಕ್ಷಣ, ಸಂಘಟನೆ , ಹೋರಾಟಗಳು ಶೋಷಿತವರ್ಗಗಳಿಗೆ ಮೂಲಮಂತ್ರವಾಗಬೇಕು. ಆಗಮಾತ್ರ ಗುಲಾಮಗಿರಿಯನ್ನು ನೀಗಿಸಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಹಣಬರ ಸಂಘದ ಶತಮಾನೋತ್ಸವ ಹಾಗೂ ಶ್ರೀ ಯಾದವಾನಂದ ಸ್ವಾಮಿಗಳ 16 ನೇ ಪಟ್ಟಾಭಿಷೆಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಯಾದವ ಸಂಘಕ್ಕೆ ನೂರು ವರ್ಷಗಳು ಸಂದಿದ್ದು, ಸಮಾಜವನ್ನು ಸಂಘಟಿಸಿ ಮುಖ್ಯವಾಹಿನಿಗೆ ತರಲು ಸಹಕಾರಿಯಾಗಿದೆ. ಎಲ್ಲ ಜಾತಿಗಳು ತಮ್ಮ ಕಸುಬಿನಿಂದಲೇ ನಿರ್ಮಾರ್ಣವಾಗಿವೆ. ಸಮಾಜವನ್ನು ವಿಭಜಿಸಲು, ಕಸುಬಿನ ಆಧಾರದಲ್ಲಿ ಜಾತಿಯೆಂದು ಕರೆಯಲಾಯಿತು. ಗೊಲ್ಲ ಜಾತಿಯಲ್ಲಿ ,ಕಾಡು ಗೊಲ್ಲ, ಅಡವಿ ಗೊಲ್ಲ ಸೇರಿದಂತೆ ಹಲವು ಉಪಜಾತಿಗಳಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಬಹುಸಂಖ್ಯಾತರು ಅಕ್ಷರಸಂಸ್ಕೃತಿಯಿಂದ ವಂಚಿತರು
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರು ದೀನದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಅವಕಾಶವಂಚಿತರು ಸಮಾಜದಲ್ಲಿ ಏಳಿಗೆಯನ್ನು ಕಾಣಲು ಶಿಕ್ಷಣ ಅತ್ಯಗತ್ಯ. ಶಿಕ್ಷಣ, ಸಂಘಟನೆ , ಹೋರಾಟ ಎಂಬ ಮೂರುಮಂತ್ರಗಳನ್ನು ಶೋಷಿತವರ್ಗಗಳಿಗೆ ಬೋಧಿಸಿದ್ದಾರೆ. ಸಮಾಜದಲ್ಲಿ ಅಸಮಾನತೆ ಸಾಕಷ್ಟಿದೆ. ಬಹುಸಂಖ್ಯಾತರು ಅಕ್ಷರಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಮನುಸ್ಮೃತಿಯ ಪಾಲನೆಯಿಂದ, ಸಮಾಜದಲ್ಲಿ ತಂದು, ಬ್ರಾಹ್ಮಣರು, ವೈಶ್ಯರು,ಕ್ಷತ್ರಿಯರು ಹಾಗೂ ಶೂದ್ರರು ಎಂದು ಚತುರ್ವಣ ಪದ್ಧತಿಯನ್ನು ಜಾರಿಗೆ ತಂದು, ಶೂದ್ರರನ್ನು ಶಿಕ್ಷಣದ ಅವಕಾಶವನ್ನು ನೀಡಲಾಗಿರಲಿಲ್ಲ. ಆದ್ದರಿಂದ ಸಮಾನ ಅವಕಾಶ ಹಾಗೂ ಶಿಕ್ಷಣ ಪಡೆದ ವರ್ಗಗಳಷ್ಟೇ ಸಮಾಜದಲ್ಲಿ ಉನ್ನತಿಯನ್ನು ಕಾಣಲು ಸಾಧ್ಯವಾಯಿತು ಎಂದರು.
ಸಮಾನತೆಯಿಂದ ಸಮಾಜದ ಅಭಿವೃದ್ಧಿ
ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಸಮಾನತೆಯಿರುವ ವೈರುಧ್ಯದ ಸಮಾಜದಲ್ಲಿ ಕಾಲಿಡುತ್ತಿದ್ದೇವೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ರವರು ತಿಳಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮಾನತೆ ಬಂದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಸಮಾಜದಲ್ಲಿ ಅವಕಾಶ ವಂಚಿತರಿಗೆ, ಬಡವರಿಗೆ, ಶೋಷಿತರಿಗೆ ಸಮಾನ ಅವಕಾಶ ಹಾಗೂ ಸಮಾನತೆಯನ್ನು ಪಡೆಯಲು ಹೋರಾಟ ಮಾಡಬೇಕು ಎಂದರು.
1918ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ಸಂಬಂಧ ಮಿಲ್ಲರ್ ಆಯೋಗವನ್ನು ರಚಿಸಿದರು. ಬ್ರಾಹ್ಮಣೇತರ ಸಮುದಾಯಗಳಿಗೆ ಶೇ.75 ರಷ್ಟು ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ನೀಡಲಾಯಿತು. ನಂತರ ಮೀಸಲಾತಿ ಸೌಲಭ್ಯಕ್ಕಾಗಿ ಹಲವು ಆಯೋಗಗಳನ್ನು ರಚಿಸಲಾಗಿದೆ. ಶಿಕ್ಷಣ ಪಡೆಯದಿದ್ದರೆ ಗುಲಾಮಗಿರಿ ಹೆಚ್ಚಲಿದ್ದು, ಸ್ವಾಭಿಮಾನದ ಬದುಕು ಸಾಧ್ಯವಾಗುವುದಿಲ್ಲ. ಶಿಕ್ಷಣ ಪಡೆದಿದ್ದರಿಂದ ಮಾತ್ರ ಮುಖ್ಯಮಂತ್ರಿಯ ಹುದ್ದೆಗೇರಲು ಸಾಧ್ಯವಾಯಿತು ಎಂದು ಮುಖ್ಯಮಂತ್ರಿಗಳು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಶಿಕ್ಷಣದ ಮಹತ್ವವನ್ನು ಸಭಿಕರಿಗೆ ವಿವರಿಸಿದರು.
ಸಮಾಜಕ್ಕೆ ಆರ್ಥಿಕ ಸಹಾಯ ನೀಡಲು ಸಿಎಂ ಭರವಸೆ
ಗೊಲ್ಲ ಸಮಾಜದವರೂ ಸೇರಿದಂತೆ ಎಲ್ಲ ತಳಸಮುದಾಯದವರು ಉತ್ತಮ ಶಿಕ್ಷಣ ಪಡೆದು ವೈದ್ಯರು, ಐಪಿಎಸ್-ಐಎಎಸ್ ಅಧಿಕಾರಿಗಳು, ವಕೀಲರಾಗಬಹುದು. ಯಾದವ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚಿಸುವ ಬೇಡಿಕೆಇದೆ. ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ, ಆರ್ಥಿಕ ಸಹಾಯ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಸಮಾಜದ ಸಂಘಟನೆಯತ್ತ ಯಾದವ ಸಮುದಾಯದ ಮುಖಂಡರು ಗಮನಹರಿಸಬೇಕು ಎಂದು ಎಂದರು.

